Tuesday, December 28, 2010

ಗುರಿ - ಶ್ರಮ - ಶ್ರದ್ಧೆ - ಸಹನೆ - ನಂಬಿಕೆ

ಸಾಧನೆಯ ಹಾದಿಯಲ್ಲಿ ನಿಮಗೆ ಅತೀ ಅಗತ್ಯವಾಗಿದ್ದ ಆರು ಗೆಳೆಯರಲ್ಲಿ ಗುರಿ - ಶ್ರಮ - ಶ್ರದ್ಧೆ - ಸಹನೆ - ನಂಬಿಕೆಯೆಂಬ ಐದು ಗೆಳೆಯರನ್ನು ಪರಿಚಯಿಸಿಕೊಂಡಿರಲ್ಲವೆ? ಇನ್ನು ಕೊನೆಯ ಗೆಳೆಯ ಒಬ್ಬನಿದ್ದಾನೆ. ಅವನ ಹೆಸರು ಪ್ರಾಮಾಣಿಕತೆ!...
ಆ ಹೆಸರು ಕೇಳುತ್ತಿದ್ದಂತೆಯೇ ಗಹಗಹಿಸಿ ನಗಬೇಕೆನಿಸುತ್ತದೆಯಾ?... ನಿಜ. ಇಂದಿನ ಈ ಜಗತ್ತಿನಲ್ಲಿ ಬಹಳಷ್ಟು ಜನರಿಗೆ ಅಂಥಹಾ ಗೆಳೆಯ ಬೇಡವೇ ಬೇಡ. ಅವನು ಕೈ ಹಿಡಿದು ನಡೆಸುವುದಿಲ್ಲ, ಕೈಕೊಟ್ಟು ಮಣ್ಣು ತಿನ್ನಿಸುತ್ತಾನೆ. ಆತನನ್ನು ನಂಬಿಕೊಂಡರೆ ಚಿಪ್ಪೇ ಗತಿ: ಇದು ಶೇ.೯೦ ರಷ್ಟು ಜನರ ಪ್ರಾಮಾಣಿಕ ಅಭಿಪ್ರಾಯ. ಡೂ ಇಟ್ ಬೈ ಹುಕ್ ಆರ್ ಕ್ರೂಕ್ ಎಂಬುದು ಎಲ್ಲರ ಮನೋಮಂತ್ರ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ ಎಂಬುದೊಂದು ಲೋಕೋಕ್ತಿ. ಬದುಕನ್ನೇ ಯುದ್ಧ ಎಂದುಕೊಂಡರೆ ಆಗ ಏನೇ ಮಾಡಿದರೂ ಸರಿಯೇ ಸರಿ ಎಂದು ಕೆಲವರು ಆ ಮಾತನ್ನು ಸರಿಪಡಿಸಿಕೊಳ್ಳುತ್ತಾರೆ. ಅಲ್ಲಿ ಬದುಕೇ ಮುಖ್ಯವಾದ್ದರಿಂದ ನ್ಯಾಯ-ಅನ್ಯಾಯ, ನೀತಿ-ಅನೀತಿ, ಧರ್ಮ-ಅಧರ್ಮಗಳ ವ್ಯತ್ಯಾಸವೇ ಇರುವುದಿಲ್ಲ. ನಯವಂಚಕತೆ, ನಾಟಕೀಯತೆ, ಮೋಸ, ವಂಚನೆ, ಕುಟಿಲತೆ... ಹೀಗೆ ನಾನಾ ನಮೂನೆಯ ವಿಚಿತ್ರ ಗೆಳೆಯರು ಬಂದು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ಇವರೇ ಬದುಕಿನ ಗುರಿಯನ್ನು ನಿರ್ದೇಶಿಸತೊಡಗುತ್ತಾರೆ. ಈ ನೂರು ಕೌರವರ ನಡುವೆ ನಿಮ್ಮ ಪಂಚ-ಪಾಂಡವ ಗೆಳೆಯರು ಏಗಲಾಗದೆ ಸಾಗಲಾಗದೆ ಆಗಾಗ ವನವಾಸ ಅಜ್ಞಾತವಾಸಕ್ಕೆ ಹೊರಡುತ್ತಾರೆ.
ಪ್ರಾಮಾಣಿಕತೆಯೆಂಬ ಕೃಷ್ಣನೊಬ್ಬ ಮಾತ್ರ ಈ ಕುರುಕ್ಷೇತ್ರದಲ್ಲಿ ಪಾಂಡವರಿಗೆ ಜಯ ತಂದುಕೊಡಬಲ್ಲ. ನಿಮಗೆ ಯಾರು ಬೇಕು ಹೇಳಿ!...
ಒಂದು ಕ್ಷಣ ನಿಮ್ಮ ಮನಸ್ಸು ಹೀಗೆ ಗಂಭೀರವಾಗಿ ಯೋಚಿಸುವುದಾದರೆ... ನಿಮ್ಮದೇ ಒಂದು ಅತಿ ಮುಖ್ಯ ಪ್ರಶ್ನೆಗೆ ಬರೋಣ. ಪ್ರಾಮಾಣಿಕತೆ ಯಾಕೆ ಬೇಕು?... ನಿಜವಾಗಿಯೂ ಅದರಿಂದ ಗೆಲ್ಲುತ್ತೇವಾ?... ಅಕಸ್ಮಾತ್ ಗೆಲ್ಲದಿದ್ದರೆ?...
ಗೆಳೆಯರೆ, ಪ್ರಾಮಾಣಿಕತೆ ಏಕೆ ಬೇಕೆಂದರೆ ಅದು ಆತ್ಮತೃಪ್ತಿಗೆ!... ಹೌದು... ಕೇವಲ ಆತ್ಮತೃಪ್ತಿಗೆ!... ನಾವು ನಡೆದುಬಂದ ಹೆಜ್ಜೆಗಳ ಕಡೆಗೊಮ್ಮೆ ಹಿಂತಿರುಗಿ ನೋಡಿದಾಗ... ನಮ್ಮ ಬಗ್ಗೆ ನಮಗೇ ನಾಚಿಕೆಯೆನಿಸುವುದಾದರೆ, ಛಿ!... ಥೂ!... ಅನ್ನಿಸುವುದಾದರೆ, ಅಥವಾ ಆ ಹೆಜ್ಜೆಗಳ ಅನುಭವವನ್ನು ಇನ್ನೊಬ್ಬರೊಡನೆ ಹಂಚಿಕೊಳ್ಳಲು ಮುಜುಗರವಾಗುವುದಾದರೆ... ಆ ಬದುಕು ಯಾಕಾದರೂ ಬೇಕು ಹೇಳಿ. ಸರಿ. ಪ್ರಾಮಾಣಿಕವಾಗಿ ಬದುಕಿದರೆ ಗೆಲ್ಲಲು ಸಾಧ್ಯವಿಲ್ಲ ಎಂದು ಒಪ್ಪೋಣ. ಪ್ರಾಮಾಣಿಕವಾಗಿ ಬದುಕದಿದ್ದರೆ ಮಾತ್ರ ಗೆಲ್ಲಬಹುದೆಂದು ಯಾವ ಮಹಾಪುರುಷ ಎದೆತಟ್ಟಿ ಹೇಳಿ ಹಾಗೇ ಬರೆದು ಕೊಡುತ್ತಾನೆ?... ಹೋಗಲಿ... ನೀವೇ ಆದರೂ ಶಿಲಾಶಾಸನದಂತೆ ಘೋಷಿಸಿ ಬರೆದಿಟ್ಟು ಬದುಕಲು ಸಿದ್ಧವಿದ್ದೀರಾ?...
ಇಲ್ಲ... ಆ ತುಮುಲಕ್ಕೆ ಖಂಡಿತಾ ನಿಮ್ಮಲ್ಲಿ ಉತ್ತರವಿಲ್ಲ. ಇಂತಹ ತುಮುಲಕ್ಕೆ ಒಳಗಾದ ಮೇಲಾದರೂ ನಿಮ್ಮ ಮನಸ್ಸು ಪ್ರಾಮಾಣಿಕವಾದ ಬದುಕಿಗೆ ಯಾಕೆ ತೆರೆದುಕೊಳ್ಳಬಾರದು? ಅಕಸ್ಮಾತ್ ಗೆಲ್ಲದಿದ್ದರೆ ಎಂಬ ಪ್ರಶ್ನೆ ಎರಡೂ ಹಾದಿಗಳಲ್ಲಿ ದೀಪಸ್ತಂಭದಂತೆ ಸದಾ ಕಣ್ಣುಕುಕ್ಕುತ್ತಲೇ ಇರುತ್ತದೆ. ಗೆಲ್ಲದಿದ್ದಾಗ ಎರಡೂ ಹಾದಿಗಳಲ್ಲಿ ನಿರಾಸೆಯೂ ಆಗಬಹುದೇನೋ. ಆದರೆ, ಪ್ರಾಮಾಣಿಕ ಹಾದಿಯಲ್ಲಿ ಆತ್ಮತೃಪ್ತಿಯಾದರೂ ಇರುತ್ತದೆ. ಹೆಮ್ಮೆ ಇರುತ್ತದೆ. ಒಂದು ಸಣ್ಣ ತೃಪ್ತಿಯ ನಗುವಾದರೂ ಇರುತ್ತದೆ.
ನೆನಪಿರಲಿ ಗೆಳೆಯರೆ. ನಾವು ಪುಣ್ಯಕೋಟಿಯ ನಾಡಲ್ಲಿ ಬೆಳೆದವರು. ನಮ್ಮ ಬಾಲ್ಯಗಳಲ್ಲಿ ಪುಣ್ಯಕೋಟಿಯ ಕಥೆ ಕೇಳಿ ಆಕೆಯ ತಾಯ್ತನಕ್ಕೆ, ಕೊಟ್ಟ ಮಾತಿಗೆ ತಪ್ಪದ ಪ್ರಾಮಾಣಿಕತೆಗೆ, ಕೊನೆಗೂ ಆಕೆಗೇ ಜಯವಾದುದಕ್ಕೆ ಕಣ್ತುಂಬಿಕೊಂಡವರು. ಎಲ್ಲೋ ಒಂದು ಕ್ಷಣ ಆ ಎಳವೆಯಲ್ಲೇ ನಾನೂ ಪ್ರಾಮಾಣಿಕವಾಗಿಯೇ ಬದುಕುತ್ತೇನೆ ಎಂದು ಹಂಬಲಿಸಿದವರು. ಮುಂದೆ ಬದುಕಿನ ಹಾದಿಯುದ್ದಕ್ಕೂ ಅಲ್ಲಲ್ಲಿ ತೆರೆದುಕೊಂಡ ಕಲ್ಲುಮುಳ್ಳುಗಳು ನಮ್ಮ ಹಂಬಲಿಕೆ ನಿರ್ಧಾರಗಳನ್ನು ಕೊಂಚ ಬದಲಿಸಿರಬಹುದು. ಆದರೆ, ಆ ಕಷ್ಟಗಳು, ಸುಖದ ಲಾಲಸೆಗಳು ನಮ್ಮ ಇಡಿಯ ವ್ಯಕ್ತಿತ್ವವನ್ನೇ ಬದಲಿಸಿಬಿಡುತ್ತವೆ ಎಂದರೆ ತಪ್ಪಲ್ಲವೆ?...
ಗೆಳೆಯರೆ, ಜಗತ್ತಿನಲ್ಲಿ ಇನ್ನೂ ಬಹಳಷ್ಟು ಜನ ಪ್ರಾಮಾಣಿಕರಿದ್ದಾರೆ. ಅವರನ್ನು ಗುರುತಿಸುವ ಕಣ್ಣು ನಮ್ಮದಾಗಿರಬೇಕು. ನಮ್ಮ ನೋಟಕ್ಕೆ ತಕ್ಕಂತೆ ಜಗತ್ತು ಬದಲಾಗುತ್ತದೆ. ಅದರಲ್ಲಿ, ಅನುಮಾನವೇ ಬೇಡ. ಒಮ್ಮೆ ಗುರುಗಳಾದ ಕೃಪಾಚಾರ್ಯರು ದುರ್ಯೋಧನ, ಧರ್ಮರಾಯ ಇಬ್ಬರನ್ನೂ ಕರೆದು ಊರು ಸುತ್ತಾಡಿ ಬನ್ನಿ. ಜನರು ಮತ್ತು ಊರು ಹೇಗಿದೆ ತಿಳಿಸಿ ಎಂದರಂತೆ. ಸ್ವಲ್ಪ ಹೊತ್ತು ಸುತ್ತಾಡಿ ಬಂದ ದುರ್ಯೋಧನ ವ್ಯಗ್ರನಾಗಿ ಎಲ್ಲೆಲ್ಲಿಯೂ ಅನಾಚಾರ. ಯಾರೂ ಸರಿಯಾಗಿ ಬದುಕುತ್ತಿಲ್ಲ. ಎಲ್ಲೆಲ್ಲಿಯೂ ಕಳ್ಳಕಾಕರು, ಎಲ್ಲರೂ ಸೋಮಾರಿಗಳಾಗಿದ್ದಾರೆ. ಯಾರ ಮುಖದಲ್ಲಿಯೂ ಖುಷಿಯಿಲ್ಲ. ರಾಜ್ಯದ ವ್ಯವಸ್ಥೆಯೇ ಹಾಳಾಗಿ ಹೋಗಿದೆ. ಹೀಗಾದರೆ ಈ ರಾಜ್ಯಕ್ಕೆ ಭವಿಷ್ಯವಿಲ್ಲ ಎನ್ನುತ್ತಾನೆ. ಕೃಪಾಚಾರ್ಯರು ನೀನು ಹೇಳಿದ್ದು ಸರಿ ಎಂದು ಹೇಳಿಕಳಿಸುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಬಂದ ಧರ್ಮರಾಯ ಆಹಾ!... ಊರು ಸುಭಿಕ್ಷವಾಗಿದೆ. ಜನರೆಲ್ಲರೂ ಸಂತೋಷದಿಂದಿದ್ದಾರೆ. ಪ್ರತಿಯೊಬ್ಬರೂ ಅವರವರ ಜವಾಬ್ದಾರಿ ಅರಿತು ಬದುಕುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಉನ್ನತಿಯತ್ತ ಸಾಗುತ್ತಿದೆ ಎನ್ನುತ್ತಾನೆ. ಕೃಪಾಚಾರ್ಯರು ನೀನು ಹೇಳಿದ್ದು ಸರಿ ಎಂದು ಹೇಳಿಕಳಿಸುತ್ತಾರೆ. ಆಗ ಕೃಪಾಚಾರ್ಯರ ಪತ್ನಿ ರೇಗುತ್ತಾ ಏನಿದು?... ಇಬ್ಬರಿಗೂ ನೀನು ಹೇಳಿದ್ದೇ ಸರಿ ಎಂಬಂತೆ ಹೇಳಿಕಳಿಸಿದಿರಲ್ಲ. ಇಬ್ಬರಲ್ಲಿ ಯಾರು ಸರಿ?... ಎನ್ನುತ್ತಾರೆ. ಆಗ ಕೃಪಾಚಾರ್ಯರು ನಗುತ್ತಾ ಇಬ್ಬರೂ ಸರಿ, ಏಕೆಂದರೆ ಈ ಜಗತ್ತು ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರುತ್ತದೆ. ಒಳ್ಳೆಯವರು ಕೆಟ್ಟವರು ಎಂಬ ಎರಡು ವರ್ಗಗಳು ಎಲ್ಲಾ ಕಾಲದಲ್ಲೂ ಒಟ್ಟಾಗಿಯೇ ಬದುಕುತ್ತಿವೆ. ಆದರೆ, ನೋಡುವವನ ದೃಷ್ಟಿಗೆ ತಕ್ಕಂತೆ ಲೋಕದ ಬಣ್ಣ ತೆರೆದುಕೊಳ್ಳುತ್ತಾ ಹೋಗುತ್ತದೆ. ದುರ್ಯೋಧನನ ಮನಸ್ಸು ಸದಾ ಕೆಟ್ಟದ್ದನ್ನೇ ಯೋಚಿಸುತ್ತದೆ. ಪ್ರತಿಯೊಂದರಲ್ಲೂ ಕೆಟ್ಟದ್ದನ್ನೇ ಕಾಣುತ್ತದೆ. ಹಾಗಾಗಿಯೇ ಜಗತ್ತಿನ ತುಂಬ ಕಳ್ಳಕಾಕರೇ ಕಾಣುತ್ತಾರೆ. ಧರ್ಮರಾಯ ವಿವೇಕಿ. ಸೌಜನ್ಯದ ಕಣ್ಣಿನಿಂದ ಜಗತ್ತನ್ನು ನೋಡುತ್ತಾನೆ. ಹಾಗಾಗಿಯೇ ಜಗತ್ತು ಆತನಿಗೆ ಪ್ರಾಮಾಣಿಕವಾಗಿ ಸುಂದರವಾಗಿ ಕಾಣುತ್ತದೆ. ಅಷ್ಟೆ ಎಂದು ಹೇಳಿ ಮುಗಿಸುತ್ತಾರೆ.
ಗೆಳೆಯರೆ,
ನಾವು ದುರ್ಯೋಧನರಲ್ಲ ; ಧರ್ಮರಾಯನಂಥವರು ಎಂದುಕೊಂಡು, ಅದನ್ನೇ ಆಚರಿಸುತ್ತಾ ಬಂದದ್ದನ್ನೆಲ್ಲ ಎದುರಿಸುವ ಪ್ರಯತ್ನ ಮಾಡೋಣ.
ಬೇರೆಯವರಿಂದ ಪ್ರಾಮಾಣಿಕತೆ ನಿರೀಕ್ಷಿಸುವ ಮೊದಲು ನಾವು ಪ್ರಾಮಾಣಿಕರಾಗಿರೋಣ. ಬೇರೆಯವರು ಅಪ್ರಾಮಾಣಿಕರಾಗಿ ಮುಂದೆ ಸಾಗಿದರೂ ನಾವು ಮನಸ್ಸು ಬದಲಿಸದೇ ಬದುಕೋಣ.
ಸಾಧನೆ ನಮ್ಮಂತವರಿಗಲ್ಲದೆ ಇನ್ನಾರಿಗೆ ಒಲಿಯುತ್ತದೆ? ನಂಬಿಕೆಯಿರದಿದ್ದರೆ ಯಾವುದೇ ಸಾಧಕರ ಬದುಕಿನ ಚರಿತ್ರೆಯನ್ನು ಬೇಕಾದರೂ ಓದಿ. ಇದು ಸತ್ಯಸ್ಯ ಸತ್ಯ.
ನಿಮ್ಮ ಸಾಧನೆಯ ಹಾದಿಯ ಪಯಣ ಹೇಗಿದೆ?... ಇಲ್ಲಿಯವರೆಗೆ ನಿಮ್ಮ ಪಯಣದ ಆರು ಜೊತೆಗಾರರನ್ನು ಪರಿಚಯಿಸಿಕೊಂಡಿದ್ದೀರಿ. ಅವರೆಲ್ಲರ ಸಹವಾಸ ನಿಮ್ಮಲ್ಲಿ ಹೊಸ ಹುರುಪು ಉತ್ಸಾಹ ತುಂಬಿದೆಯೆಂದು ನಂಬಿದ್ದೇನೆ.
ಬೆಳಗಾಗ ಎದ್ದು ಯಾರ‍್ಯಾರ ನೆನೆಯಾಲೀ...
ಒಂದು ಜನಪ್ರಿಯ ಜಾನಪದ ಹಾಡಿನ ಸಾಲಿದು. ನೀವೆಲ್ಲರೂ ಕೇಳಿರುತ್ತೀರಿ. ಆ ಸಾಲಿನಿಂದಲೇ ಮಾತು ಆರಂಭಿಸೋಣ. ಹಾಂ!... ಇದು ಕೇವಲ ಮಾತಿನ ವಿಚಾರಕ್ಕಲ್ಲ. ನಮ್ಮ ಬದುಕಿನ ದಿನಚರಿಯ ಮೊದಲ ಕಾರ್ಯ.
ಪ್ರತಿ ಬೆಳಗೂ ಕೂಡ ನಮ್ಮ ಪಾಲಿಗೆ ಒಂದು ಮರುಜನ್ಮ. ಅಂಥಹಾ ಒಂದು ಭಾವನೆ ಉದಯಿಸಲೆಂದೇ ಉದಯ ತನ್ನ ಹೃದಯ ತೆರೆದು ಹೊಂಗಿರಣಗಳಿಂದ ಭೂಮಿಯನ್ನು ತುಂಬಿಸುತ್ತಾನೆ. ಆ ಉದಯಕಾಲದ ಸೊಬಗಿಗೆ ಪಕ್ಷಿಗಳು ಸ್ಪಂದಿಸುವಂತೆ ನಮ್ಮಲ್ಲಿಯೂ ಅಂಥಹ ಸಂಭ್ರಮ ಸಡಗರ ಉಂಟಾಗಬೇಕು. ಒಳ್ಳೆಯ ವಿಚಾರ ಹುಟ್ಟಬೇಕು. ಅದಕ್ಕಾಗಿಯೇ, ನಮ್ಮ ಹಿರಿಯರು ಎದ್ದ ತಕ್ಷಣ ಒಳ್ಳೆಯದೆಲ್ಲವನ್ನೂ ಒಮ್ಮೆ ನೆನೆಯಲಿ ಎಂದು ಬಯಸಿ ಬೆಳಗಾಗ ಎದ್ದು ಶಿವನಾ ನೆನೆದೇನಾ. ಎಂದು ಹಾಡುತ್ತಾರೆ. ಅಲ್ಲಿಂದ ಮುಂದುವರೆದು ಭೂಮಾತೆ, ಗೋಮಾತೆ, ಜನ್ಮದಾತೆ, ಗುರುಹಿರಿಯರೆಲ್ಲರನ್ನೂ ನೆನೆಯಲು ಹೇಳುತ್ತಾರೆ.
ಎಲ್ಲರನ್ನೂ ಒಮ್ಮೆ ನೆನೆಯುತ್ತೀರೋ ಇಲ್ಲವೋ... ಆದರೆ ಸದಾ ಸಾಧನೆಯ ಹಾದಿಗೆ ತುಡಿಯುವ ನಾವೂ ನೀವೂ... ಪ್ರತಿದಿನ ಯಾರಾದರೊಬ್ಬ ಸಾಧಕರನ್ನು ನೆನೆದರೆ ಎಷ್ಟು ಹಿತಕರವಾಗಿರುತ್ತದೆಯಲ್ಲವೆ?...ಹೌದು. ನಮ್ಮ ಪ್ರತಿಬೆಳಗೂ ಕೂಡ ಯಾರಾದರೊಬ್ಬ ಸಾಧಕನನ್ನು ನೆನೆಯುವುದು ಬಹಳ ಒಳ್ಳೆಯದು. ಅವರ ಬದುಕು, ಕಾರ್ಯಶೈಲಿ, ಶಿಸ್ತು, ಸಮಯಪ್ರಜ್ಞೆ, ಕಷ್ಟನಷ್ಟಗಳು ಎಷ್ಟೇ ಬಂದರೂ ಎದುರಿಸಿ ನಡೆದ ದಿಟ್ಟತನ, ಅದಕ್ಕೆ ಸಂಬಂಧಪಟ್ಟ ಸಾಲು ಸಾಲು ಘಟನೆಗಳು ಇದೆಲ್ಲವೂ ಕಣ್ಮುಂದೆ ಸಾಲುಸಾಲಾಗಿ ಸಾಗಿ ಹೋಗುವಾಗ...
ಸಾಕು... ಹತ್ತೇ ಹತ್ತು ನಿಮಿಷ ಧ್ಯಾನದಂತೆ ಕುಳಿತು ಯೋಚಿಸಿದರೂ ಸಾಕು!... ಮನಸ್ಸು ಪ್ರಪುಲ್ಲಿತವಾಗುತ್ತದೆ. ತಾನೇ ತಾನಾಗಿ ನಿಮಗೇ ಅರಿವಾಗದಂತೆ ತುಟಿಯಂಚಿನಿಂದ ಮುಗುಳ್ನಗೆಯೊಂದು ಜಾರುತ್ತದೆ. ಮನಸ್ಸು ಅವರ ಬದುಕಿನ ಪುಟಗಳಿಗೂ ನಿಮ್ಮ ಬದುಕಿನ ಪುಟಗಳಿಗೂ ತಾಳೆ ಹಾಕುತ್ತದೆ. ಅವಕಾಶಗಳ ಅನಂತ ಆಕಾಶದ ಕಡೆಗೆ ನಿಮ್ಮ ಕಣ್ಣು ತಿರುಗಿಸುತ್ತದೆ. ಹುರಿದುಂಬಿಸುತ್ತದೆ. ನಿಮ್ಮೆಲ್ಲ ಸಿಟ್ಟು ಸೆಡವು ಹತಾಶೆ ನೋವುಗಳನ್ನು ಎದೆಯೊಳಗಿಂದ ಎಳೆದು ಒಂದು ದೀರ್ಘವಾದ ಉಸಿರ ಮೂಲಕ ಹೊರಚೆಲ್ಲಿ ಮೈಮನಸ್ಸು ಹಗುರವಾಗುವಂತೆ ಮಾಡುತ್ತದೆ.
ಅಷ್ಟು ಸಾಕಲ್ಲ!?...
ಆಹಾ!... ಈಗ ಕಣ್ತೆರೆದು ನೋಡಿ. ಈ ಜಗತ್ತು ಎಷ್ಟು ಸುಂದರವಾಗಿದೆ!?... ಇರಲಿ. ನಿನ್ನೆಯ ರಾತ್ರಿ ಊಟ ಸಿಕ್ಕದೆ ಹಸಿದು ಮಲಗಿದ್ದು ಫಕ್ಕನೆ ನೆನಪಾಗಬಹುದು. ಆದರೆ ಅದನ್ನು ಬದಿಗೊತ್ತಿ. ಯಾರಾರೋ ಬೇಡವಾದ ಮುಖಗಳೆಲ್ಲ ಮುಂದೆ ಬರುತ್ತಾ ಕಿರಿಕಿರಿಯಾಗಬಹುದು. ಆದರೆ, ಕಣ್ಮುಂದೆ ಕೆಲವೇ ನಿಮಿಷಗಳ ಹಿಂದೆ ಬಂದು ನಿಂತಿದ್ದ ಸಾಧಕನ ಕಡೆಗೊಮ್ಮೆ ನೋಡಿ. ಅಷ್ಟೆ. ಮೈಕೊಡವಿ ಮೇಲೆದ್ದು ನಿಮ್ಮ ಸಾಧನೆಯ ಹಾದಿಯ ಕಡೆ ತಿರುಗಿಕೊಳ್ಳಿ.
ಅದನ್ನು ಬಿಟ್ಟು ’ಅಯ್ಯೋ... ಮತ್ತೆ ಶುರುವಾಯಿತಾ ಈ ಹೊಡಬಾಳ ಬದುಕು’ ಎಂದು ನಿಟ್ಟುಸಿರಿಟ್ಟರೆ ಇಡೀ ದಿವಸದ ಪ್ರತಿಕ್ಷಣವೂ ಹುಳಿಹುಳಿ ಕಸಿವಿಸಿ. ಬಹಳಷ್ಟು ಜನರಿಗೇ ಇದೇ ದೊಡ್ಡ ಸಮಸ್ಯೆ. ಎಷ್ಟೇ ಬುದ್ದಿ ಇದ್ದರೂ, ಎಷ್ಟೇ ಶಕ್ತಿ ಇದ್ದರೂ ಗೆಲ್ಲಬಲ್ಲ ಸಾಮರ್ಥ್ಯವಿದ್ದರೂ ಪದೇ ಪದೇ ’ಅಯ್ಯೋ...’ ಎನ್ನುತ್ತಾ, ನಿಟ್ಟುಸಿರಿಡುತ್ತಾ ಕಾಲೆಳೆದುಕೊಂಡೇ ಓಡಾಡುತ್ತಾರೆ.
ಇದು ಯಾವುದೇ ಸಾಧಕನ ಮನಸ್ಸಿಗೆ ಬರಬಾರದ ರೋಗ. ಇದಕ್ಕೆ ’ಸ್ವಮರುಕ’ ಎನ್ನುತ್ತಾರೆ. ನನ್ನ ಕಷ್ಟಕ್ಕೆ ಯಾರೂ ’ಅಯ್ಯೋ ಪಾಪ’ ಎನ್ನುವವರು ಇಲ್ಲವಲ್ಲಾ ಎಂದು ಇಡೀ ಜಗತ್ತಿಗೇ ಹಿಡಿಹಿಡಿ ಶಾಪ ಹಾಕಿ ತಮಗೆ ತಾವೇ ’ಅಯ್ಯೋ ಪಾಪ’ ಎಂದು ಒಂದು ಹಿಡಿ ಮರುಕ ನೀಡಿಕೊಳ್ಳುತ್ತಾರೆ. ನನ್ನ ಪ್ರತಿಭೆ ಯಾರೂ ಗುರುತಿಸುವವರಿಲ್ಲ ಎಂದು ಹಲುಬುತ್ತಾರೆ. ತಮಗೆ ತಾವೇ ’ಹೌದು ಕಣೋ. ಈ ಜಗತ್ತಿಗೆ ಬುದ್ದಿ ಇಲ್ಲ’ ಎಂದು ಸಮಾಧಾನಿಸಿಕೊಳ್ಳುತ್ತಾರೆ. ನನ್ನನ್ನು ಯಾರೂ ಪ್ರೀತಿಸುವರಿಲ್ಲ ಎಂದು ಗೋಳಿಡುತ್ತಾರೆ. ’ಹೌದು ಕಣೋ. ನಿನ್ನ ಬೆಲೆ ಯಾರಿಗೂ ಗೊತ್ತಿಲ್ಲ’ ಎಂದು ತಮಗೆ ತಾವೇ ತಲೆಸವರಿಕೊಳ್ಳುತ್ತಾರೆ. ಈ ಜಗತ್ತಲ್ಲಿ ನಾನು ತುಂಬ ಒಂಟಿ. ನನ್ನ ನೋವು ಬೇರೆ ಯಾರಿಗೂ ಇಲ್ಲ ಎಂದು ಅಳುತ್ತಾ ಹೊದ್ದು ಮಲಗುತ್ತಾರೆ. ’ಹೌದೌದು ಕಣೋ. ನಿನಗೂ ಒಂದು ಕಾಲ ಬರುತ್ತೆ. ಸಮಾಧಾನ ಮಾಡ್ಕೋ’ ಅಂತ ತಮಗೆ ತಾವೇ ತಟ್ಟಿ ಮಲಗಿಸಿಬಿಡುತ್ತಾರೆ.
ಸ್ವಮರುಕ ಎಂದರೆ ಇದೇ. ಸೆಲ್ಫ್‌ಪಿಟಿ ಎಂದೂ ಹೇಳಬಹುದು. ಇದು ಬಹುತೇಕ ಶೇಕಡಾ ಎಂಭತ್ತರಷ್ಟು ಸಾಮಾನ್ಯ ಜನರ ಸಾಮಾನ್ಯ ರೋಗ. ಆದರೆ ಶೇ. ಹತ್ತರಷ್ಟು ಜನ ಹಾಗೆ ಯೋಚಿಸುವುದಿಲ್ಲ. ಹಾಗಾಗಿಯೇ ಅವರು ಸಾಧಕರಾಗುತ್ತಾರೆ. ನಾವು ಆ ಹತ್ತರಲ್ಲಿ ಒಬ್ಬರಾಗಬೇಕೇ ಹೊರತು ಎಂಭತ್ತರಲ್ಲಿ ಒಬ್ಬರಾಗಬಾರದು. ಅದಕ್ಕಾಗಿ ನಮ್ಮ ಚಿಂತನಾಧಾಟಿಯನ್ನೇ ಬದಲಿಸಿಕೊಳ್ಳಬೇಕು.
ಅದು ಬಹಳ ಸುಲಭ ! ಹೀಗೆ ಯೋಚಿಸಿ.
’ನನ್ನ ಪ್ರತಿಭೆ ಯಾರೂ ಗುರುತಿಸುವವರಿಲ್ಲ’ ಎಂದು ಹಲುಬುವ ಬದಲು ಎಲ್ಲರೂ ಗುರುತಿಸುವಷ್ಟು ನಾನು ನನ್ನ ಪ್ರತಿಭೆಯನ್ನು ಬೆಳೆಸಿಕೊಳ್ಳುತ್ತಿಲ್ಲ, ಬಳಸಿಕೊಳ್ಳುತ್ತಿಲ್ಲ. ಅದು ಮೊದಲು ಆಗಬೇಕಾದ ಕೆಲಸ ಎಂದು ಯೋಚಿಸುಬಹುದಲ್ಲ !... ’ನನ್ನ ಪ್ರತಿಭೆ ಗುರುತಿಸದ ಜಗತ್ತಿಗೇ ಬುದ್ದಿ ಇಲ್ಲ’ ಎಂದು ಬೈದುಕೊಳ್ಳುವ ಬದಲು ’ಈ ಜಗತ್ತು ಗುರುತಿಸುವಂತೆ ಮಾಡುವುದು ಹೇಗೆ ?’ ಎಂದು ಚಿಂತಿಸಿ ಬುದ್ಧಿವಂತರಾಗಬಹುದಲ್ಲ !... ’ನನ್ನನ್ನು ಯಾರೂ ಪ್ರೀತಿಸುವವರಿಲ್ಲ’ ಎಂದು ಗೋಳಿಡುವ ಬದಲು ’ಯಾರು ಪ್ರೀತಿಸಬೇಕು ?... ಯಾಕೆ ಪ್ರೀತಿಸಬೇಕು ?... ಎಷ್ಟು ಪ್ರೀತಿಸಬೇಕು ?... ಪ್ರೀತಿಸದಿದ್ದರೆ ನನಗಾಗುವ ನಷ್ಟ ಏನು ?... ಸುಮ್ಮನೇ ಹೀಗೇ ವ್ಯರ್ಥವಾಗಿ ನೊಂದುಕೊಳ್ಳುತ್ತಾ ಕುಳಿತರೆ ಅದರಿಂದಾಗುವ ನಷ್ಟ ಏನು ?... ಗೆದ್ದವರಿಗೆ ಕೇಳದೇನೇ ಪ್ರೀತಿ ದೊರೆಯುತ್ತದೆ. ಸೋತವನಿಗೆ ಬೇಡಿದರೂ ಪ್ರೀತಿ ಒಲಿಯುವುದಿಲ್ಲ. ಗೆಲ್ಲುವುದಷ್ಟೇ ನನಗೆ ಮುಖ್ಯವಾಗಬೇಕು ಎಂದೇಕೆ ಚಿಂತಿಸಬಾರದು ?...
ಈ ಜಗತ್ತಲ್ಲಿ ನಾನು ತುಂಬಾ ಒಂಟಿ ಎನ್ನುವುದರ ಬದಲು, ಜಗತ್ತಿನಲ್ಲಿ ಎಲ್ಲರೂ ಒಂಟಿಯೇ. ಅವರವರ ಭಾರ ಅವರವರೇ ಹೊರಬೇಕು. ಅವರವರ ಹಣೆಬರಹ ಅವರವರೇ ಬರೆದುಕೊಳ್ಳಬೇಕು. ಎಲ್ಲರಿಗಿಂತ ನಾನೇನು ಬೇರೆ ಅಲ್ಲ. ನಾನೊಬ್ಬನೇ ನೋವು ಅನುಭವಿಸುತ್ತಿಲ್ಲ, ಬದುಕಲು ಬಯಸುವ ಪ್ರತೀ ಜೀವಿಗೂ ನೋವು ಅನಿವಾರ್ಯ ಎಂದು ಚಿಂತಿಸಬಹುದಲ್ಲಾ ?... ಸುಮ್ಮನೇ ಅಳುತ್ತಾ ಹೊದ್ದು ಮಲಗುವ ಬದಲು, ನನಗೂ ಒಂದು ಕಾಲ ಬರುತ್ತದೆ ಅಂತ ಸುಳ್ಳು ಸುಳ್ಳೇ ಸಮಾಧಾನ ಮಾಡಿಕೊಳ್ಳುತ್ತಾ ಏನೇನೂ ಪ್ರಯತ್ನ ಮಾಡದೆ ಬಿದ್ದುಕೊಳ್ಳುವ ಬದಲು,ದೆ ಸೆಟೆದು ಮೇಲೆದ್ದು ಕಾಲಕ್ಕಾಗಿ ಕಾಯದೆ ಹೊಸ ಹೊಸ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳಬಹುದಲ್ಲ !...
ಗೆಳೆಯರೇ... ಇದನ್ನು ಪಾಸಿಟಿವ್ ಥಿಂಕಿಂಗ್ ಎಂದು ಕರೆಯುತ್ತಾರೆ. ಆಶಾವಾದಿತನ ಎಂದು ಕೂಡಾ ಹೇಳುತ್ತಾರೆ. ಇದು ಸಾಧಕರಾಗುವಲ್ಲಿ ಅನಿವಾರ್ಯವಾದ ಮೊದಲ ಬದಲಾವಣೆ. ಇದಿಲ್ಲದೆ ನಾವು ಒಂದು ಹೆಜ್ಜೆ ಕೂಡಾ ಸಾಧನೆಯ ಹಾದಿಯಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ.
ಬನ್ನಿ. ನಾವು ಆಶಾವಾದಿಗಳಾಗೋಣ. ಗೆಲುವನ್ನು ನಮ್ಮದಾಗಿಸಿಕೊಳ್ಳೋಣ.

ಜೀವ ಕೊಟ್ಟ ತಾಯಿಗೆ ಜೀವ ಕೊಡ್ರೂ ಪ್ರೀತಿಸೋ ಹುಡುಗಿಗಲ್ಲ"

ಜೀವ ಕೊಟ್ಟ ತಾಯಿಗೆ ಜೀವ ಕೊಡ್ರೂ
ಪ್ರೀತಿಸೋ ಹುಡುಗಿಗಲ್ಲ".


ಮಳೆಯಲ್ಲಿ ನೆನೆದು
ಮನೆಗೆ ಬಂದೆ,
ಮನೆಯವರೆಲ್ಲ
ಬೈದರು
ಆದರೆ
ಅಮ್ಮ ಮಾತ್ರ ಸೆರಗಲ್ಲಿ
ನನ್ನ ತಲೆ ಒರೆಸಿ
ಬೈದಳು !!!!!
ನನಗಲ್ಲ,,,,,

ಆ ಮಳೆಗೆ.................!!!

That is "Amma" ಅಲ್ವ !

"ಅಮ್ಮ ನಿನ್ನ ತೋಳಿನಲ್ಲಿ ಕಂದನಾನು" ಈ ಸಮುದಾಯವು ಅಮ್ಮನ ಮಮತೆ,ಪ್ರೀತಿ ಬಯಸುವ ಎಲ್ಲರಿಗು ಸ್ವಾಗತಿಸುತದೆ.

"ಅಮ್ಮ"
ಈ ಶಬ್ದವೇ ಹಾಗೆ ಎಷ್ಟು ಸರಿ ಕೇಳಿದರು ಎಷ್ಟು ಸರಿ ಬರೆದರು ಇನ್ನು ಕೇಳಬೇಕು ಇನ್ನು ಬರೀಬೇಕು ಅನಿಸುತ್ತೆ ಅಲ್ವ !!

ಅಂತಹ ಮಮತೆ,ಕರುಣೆ,ಪ್ರೀತಿ,ತ್ಯಾಗ ಎಲ್ಲವು ಇದರಲ್ಲಿದೆ. ಅಂದು ಹತ್ತು ತಿಂಗಳು ಹೆತ್ತು ಹೊತ್ತು ಸಾಕಿ ಬೆಳೆಸಿದ ನಮ್ಮ ಅಮ್ಮನಿಗೆ ನಾವು ಏನೇ ಕೊಟ್ಟರು ಅವಳ ವಾತ್ಸಲ್ಯದ ಮುಂದೆ ಕೇವಲ ಒಂದು ಹುಲ್ಲು ಕಡ್ದಿಯತರ ಅಲ್ವ !!!!

Monday, December 27, 2010

"ಸಾಧನೆಯ ಹಾದಿಗೆ ಹುಮ್ಮಸ್ಸು ಹುಟ್ಟಲಿ..."

ಪ್ರತಿಯೊಬ್ಬರ ಜೀವನದಲ್ಲೂ ಬಹಳಷ್ಟು ಬಾರಿ ಇಂಥಾ ಸಂದರ್ಭಗಳು ಬಂದು ಹೋಗಿರುತ್ತವೆ. ಕೈಗೆ ಬಂದ ತುತ್ತು ಬಾಯಿ ಸೇರುವ ಮುನ್ನವೇ ನೆಲಕ್ಕೆ ಜಾರಿರುತ್ತದೆ; ಬಾಯಿಗೆ ಬಂದ ತುತ್ತು ಗಂಟಲಿಗಿಳಿವ ಮುನ್ನವೇ ಮಾಯವಾಗಿರುತ್ತದೆ; ಗಂಟಲಿನಿಂದ ಕೆಳಗಿಳಿದು ಹೊಟ್ಟೆ ಸೇರಿದ್ದರೂ ವಿಷದಂತಾಗುತ್ತದೆ; ಬಯಸಿದ್ದು ಸಿಗದೇ, ಸಿಕ್ಕಿದರೂ ಬಯಸಿದಂತೆ ಸಿಗದೇ, ಬಯಸಿದಂತೆ ಸಿಕ್ಕರೂ ನೆನೆಸಿದಂತೆ ನೆಮ್ಮದಿಯಾಗಿಡದೇ... ಛೆ!... ಭಗವಂತಾ!... ನೀನೆಷ್ಟು ಕ್ರೂರಿ?... ನಿನಗೇನಾದರೂ ಮನುಷ್ಯತ್ವ ಇದೆಯಾ?... ಅಸಲಿಗೆ ನೀನು ಬದುಕಿದ್ದೀಯಾ?... ಎಂದೆಲ್ಲಾ ತಲೆಚಚ್ಚಿಕೊಂಡು ಅಳುತ್ತಾ ಕೇಳಬೇಕೆನಿಸುತ್ತದೆ!...
ಒಂದು ಕ್ಷಣ ಆ ಭಾವವನ್ನು ಹೊರದೂಡಿ ಜಗತ್ತನ್ನೊಮ್ಮೆ ಕಣ್ತೆರೆದು ನೋಡಿದರೆ... ನಮಗಿಂತ ಅಸಹಾಯಕರು, ದುರ್ದೈವಿಗಳು, ರೋಗಿಷ್ಠರು, ಅಂಗವಿಕಲರು, ಮತಿಹೀನರು, ಮತಿಭ್ರಮಿತರು, ಎಲ್ಲ ಇದ್ದೂ ಬೀದಿಗೆ ಬಿದ್ದು ನರಳುತ್ತಿರುವವರು... ಇವರನ್ನೆಲ್ಲಾ ಗಮನಿಸುತ್ತಾ ಅವರ ಬಗ್ಗೆ ಯೋಚಿಸುತ್ತಾ ಬಂದಂತೆ... ಛೆ!... ಭಗವಂತಾ!... ನೀನೆಷ್ಟು ಕರುಣಾಮಯಿ!... ಏನೋ ಈ ಮಟ್ಟಕ್ಕಾದರೂ ನನ್ನನ್ನು ಇಟ್ಟಿದ್ದೀಯಲ್ಲ ಎಂದು ಕೈಮುಗಿಯಬೇಕೆನಿಸುತ್ತದೆ.
ಇದನ್ನೂ ಮೀರಿ ಇನ್ನೂ ಒಂದು ದೃಶ್ಯ ನಮಗೆ ಕಾಣಸಿಗುತ್ತದೆ. ಕೈಯಿಲ್ಲದವರು, ಕಾಲಿಲ್ಲದವರು, ಎರಡೂ ಕಳೆದುಕೊಂಡವರು, ಜೊತೆಗೆ ಕಣ್ಣು, ಮೂಗು, ಕೈ ಬಾಯಿ ಕಳೆದುಕೊಂಡವರು... ಆ ಬದುಕೊಂದು ಬದುಕೇ ಅಲ್ಲ ಎಂಬಂತೆ ಇದ್ದರೂ... ಅಂಥಹಾ ಸಂಕಷ್ಟಗಳೆಲ್ಲವನ್ನೂ ಮೀರಿ ಅದರಲ್ಲೇ ಅದ್ವಿತೀಯ ಸಾಧನೆ ಮಾಡಿದಂಥವರು ಇರುತ್ತಾರಲ್ಲ... ಹೆಲೆನ್ ಕೆಲ್ಲೆರ್, ಸ್ಟೀಫನ್ ಹಾಕಿಂಗ್... ಹೀಗೆ ಇನ್ನೂ ಮುಂತಾದ ಮಹಾತ್ಮರು... ಅಂಥವರನ್ನು ಕಂಡಾಗ...
ಆಗ... ಛೆ!... ನಮ್ಮದೂ ಒಂದು ಜನ್ಮವಾ?... ಎಷ್ಟೆಲ್ಲಾ ಕಷ್ಟ, ನಷ್ಟ ನೋವುಗಳನ್ನು ಮೀರಿ ಎಲ್ಲ ಇದ್ದೂ ಕೊರಗುತ್ತಾ ಕೂರುವ ನಮ್ಮಂಥವರ ಕೆನ್ನೆಗೆ ಹೊಡೆದಂತೆ ಏನೇನೋ ಸಾಧಿಸಿದ ಆ ಮಹಾತ್ಮರನ್ನು ಕಂಡಾಗ, ಅವರಿಗೆ ಸೆಟೆದು ನಿಂತು ಸೆಲ್ಯೂಟ್ ಮಾಡಬೇಕೆನಿಸುತ್ತದೆ. ಇನ್ನ್ನು ಕೊರಗಿದ್ದು ಸಾಕು, ನಾನೂ ಕೂಡಾ ಏನಾದರೂ ಸಾಧಿಸಲೇಬೇಕು ಎಂಬ ಹಠ, ಛಲ, ಸಂಕಲ್ಪ, ಆಕ್ರೋಶ ಎಲ್ಲವೂ ಮಡುಗಟ್ಟುತ್ತದೆ. ಆಗ...
ದಯವಿಟ್ಟು ಆ ಕ್ಷಣಗಳನ್ನು ಹಾಗೇ ಹಿಡಿದಿಟ್ಟುಕೊಳ್ಳಿ. ಅಲ್ಲಿಂದ ನಿಮ್ಮ ಮನಸ್ಸು ಅತ್ತಿತ್ತ ಕದಲದೇ ಇರಲಿ. ಕಣ್ಣ ಮುಂದೆ ಗುರಿಯೊಂದನ್ನು ಕೇಂದ್ರೀಕರಿಸಿಕೊಂಡು, ಟೀಕೆಗಳಿಗೆ ಅಂಜದೇ, ಅಳುಕದೇ, ಅಧೀರರಾಗದೇ, ಧೃಡವಾಗಿ ಪಯಣ ಹೊರಟುಬಿಡಿ. ಸಾಧನೆಯ ಹಾದಿ ನಿಮ್ಮ ಕಣ್ಮುಂದೆ ತೆರೆದುಕೊಂಡಿರುತ್ತದೆ. ಆ ಹಾದಿಯಲ್ಲಿ... ಹಾಂ!... ಗೆಳೆಯರೇ ಸಾಧನೆಯ ಹಾದಿಯಲ್ಲಿನ ಆರು ಗೆಳೆಯರಲ್ಲಿ ಗುರಿ, ಶ್ರಮ, ಶ್ರದ್ಧೆ ಎಂಬ ಮೂವರು ಗೆಳೆಯರ ಪರಿಚಯ ನಿಮಗಾಗಿತ್ತಲ್ಲ. ಈಗ ನಾಲ್ಕನೆಯ ಗೆಳೆಯ ’ಸಹನೆ’ಯನ್ನು ಪರಿಚಯಿಸಿಕೊಳ್ಳೋಣ ಬನ್ನಿ.
ಈ ಗೆಳೆಯನ ಬಗ್ಗೆ ಏನು ಹೇಳುವುದು?... ಎಷ್ಟು ಹೇಳುವುದು?... ಏಕೆಂದರೆ ಈತ ನಿಮಗೆ ಅಪರಿಚಿತನೇನೂ ಖಂಡಿತಾ ಅಲ್ಲ. ಬಹಳಷ್ಟು ಬಾರಿ ಜೀವನದ ಬಹಳಷ್ಟು ಸಂದರ್ಭದಲ್ಲಿ ಈ ಗೆಳೆಯ ನಮ್ಮ ಕೈಬಿಟ್ಟು ಹೋದಾಗಲೇ ಅಲ್ಲವೇ... ನಾವು ಕೆಟ್ಟು ಹೊಲಗೆಟ್ಟು ಬಿಕ್ಕಳಿಸಿ ಬಸವಳಿದು ಬಿದ್ದಿರುವುದು. ಹೌದೌದು. ಈ ಗೆಳೆಯ ಸಾಧನೆಯ ಹಾದಿಗೆ ಮಾತ್ರ ಅಲ್ಲ... ಬದುಕಿನ ಹಾದಿಗೇ ದಾರಿದೀಪ.
"ತಾಳ್ಮೆ ಇದ್ದವನು ಮಾತ್ರ ಅಂದುಕೊಂಡಿದ್ದನ್ನು ಸಾಧಿಸಬಲ್ಲ" ಎಂದು ಬೆಂಜಮಿನ್ ಫ್ರಾಂಕ್ಲಿನ್ ಹೇಳುತ್ತಾನೆ. "ತಾಳ್ಮೆ ಇದ್ದವರಲ್ಲಿ ಮಾತ್ರ ಜ್ಞಾನ ಕೈಜೋಡಿಸುತ್ತದೆ" ಎಂದು ಸೇಂಟ್ ಆಗಸ್ಟಿನ್ ಹೇಳುತ್ತಾನೆ. ಅಷ್ಟೇ ಯಾಕೆ?... ತಾಳಿದವನು ಬಾಳಿಯಾನು ಎಂಬ ಗಾದೆ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೆಲ್ಲಾ ಗೊತ್ತಿದ್ದೂ ಕೂಡಾ ನಾವು ಅನೇಕ ಸಂದರ್ಭಗಳಲ್ಲಿ ಎಡವುತ್ತೇವೆ. ಎಡವಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇವೆ. ಮತ್ತೆಂದೂ ತಾಳ್ಮೆ ಸಹನೆ ಕಳೆದುಕೊಳ್ಳಬಾರದೆಂದು ನಿರ್ಧರಿಸುತ್ತೇವೆ. ಆದರೆ... ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತೇವೆ!... ಹಾದಿತಪ್ಪುತ್ತೇವೆ!...
ಈ ಸಾಧನೆಯ ಹಾದಿಯಲ್ಲಿ ಸಹನೆಯ ಪಾತ್ರ ತುಂಬ ದೊಡ್ಡದು. ಹಿಂದೆಲ್ಲಾ, ಗುರುವೊಬ್ಬ ಸಾಧನೆಯ ಹಾದಿಯಲ್ಲಿ ನಡೆಯಲು ಬಯಸಿ ಬಂದ ಶಿಷ್ಯರಿಗೆ ಇನ್ನಿಲ್ಲದಷ್ಟು ಪರೀಕ್ಷೆಗಳನ್ನಿಟ್ಟು ಕಾಡಿಸಿ ಪೀಡಿಸಿ ಆತನ ಸಹನೆಯನ್ನು ಪರೀಕ್ಷಿಸುತ್ತಿದ್ದ. ಅದೆಲ್ಲಾ ನೋವು ಸಂಕಟಗಳನ್ನು ಮೀರಿ ಸಹನೆಯಿಂದ ನಿಂತವನಿಗೆ ಮಾತ್ರ ಜ್ಞಾನಭಿಕ್ಷೆ ದೊರೆಯುತ್ತಿತ್ತು. ಈಗ ಯಾವ ವಿದ್ಯೆ ಕಲಿಯಲೂ ಕೂಡಾ ಅಂಥಹಾ ಯಾವ ಪರೀಕ್ಷೆಗಳೂ ಇಲ್ಲ. ಈಗಿನದು ಮುಕ್ತ ವ್ಯಾಪಾರದ ಮುಕ್ತ ವಿದ್ಯೆ. ಹಾಗಾಗಿಯೇ, ಆ ವಿದ್ಯೆಯ ಬಗ್ಗೆ ಇರಬೇಕಾದ ಗೌರವ ಭಯ ಭಕ್ತಿ ಮಾಯವಾಗುತ್ತಿದೆ. ಇರಲಿ ಆ ವಿಷಯ ಬದಿಗಿಡೋಣ.
ಚಿತ್ರರಂಗದ ವಿಚಾರಕ್ಕೆ ಬಂದರೆ ಆ ರಂಗವೇ ಒಂದು ರೀತಿಯಲ್ಲಿ ಮಹಾಗುರು. ಈ ಮಹಾಗುರು ನಿಮ್ಮನ್ನು ಇನ್ನಿಲ್ಲದ ರೀತಿಯಲ್ಲಿ ಕಾಡುತ್ತಾನೆ, ಪೀಡಿಸುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಆದರೆ, ಹಾಗೆ ಎಷ್ಟೇ ಕಾಡಿದರೂ, ಹಿಂಡಿ ಹಿಪ್ಪೆ ಮಾಡಿದರೂ ಗೊಣಗದೆ ಬೇಸರಿಸದೆ ಸಹನೆಯ ಹಾದಿಯಲ್ಲಿ ನಡೆಯಬೇಕಾದದ್ದು ನಮ್ಮ ಕರ್ತವ್ಯವಾಗಬೇಕಾಗುತ್ತದೆ. ಧರ್ಮವಾಗಬೇಕಾಗುತ್ತದೆ. ಸಹನೆ ಎಂಬುವನು ನಿಸ್ವಾರ್ಥ ಸೇವಕನಿದ್ದಂತೆ. ಆದರೆ, ಬಹಳಷ್ಟು ಜನ ಆ ಸೇವಕನಿಗೆ ಕರೆದು ಕೆಲಸ ಕೊಡುವ ಪ್ರಯತ್ನವನ್ನೇ ಮಾಡುವುದಿಲ್ಲ. ಗೆಳೆಯನೆಂಬ ರೀತಿಯಲ್ಲಿಯೂ ಸ್ವೀಕರಿಸುವುದೇ ಇಲ್ಲ.
ನಿಜಕ್ಕೂ ಸಹನೆ ಎಂದರೆ ಏನು? ಸುಮ್ಮನಿರುವುದು ಎಂದಷ್ಟೆಯಾ? ಇಲ್ಲ... ಸಹನೆ ಎಂದರೆ ಸುಮ್ಮನಿದ್ದಾಗ ಸುಮ್ಮನಿರುವುದಲ್ಲ. ಸುಮ್ಮನಿರಲಾಗದಂತಹ ಅತೀವ ಒತ್ತಡದಲ್ಲಿಯೂ ಸ್ಥಿಮಿತ ಕಳೆದುಕೊಳ್ಳದಂತೆ ಸುಮ್ಮನಿರುವುದು. ಹೊಟ್ಟೆ ತುಂಬಿದ ಮೇಲೆ ನಾಲ್ಕು ಗಂಟೆ ಉಪವಾಸ ಮಾಡುವುದಲ್ಲ. ಹಸಿವಿದ್ದಾಗಲೂ ನಾಲ್ಕುಗಂಟೆ ಉಪವಾಸ ಕೂರುವುದು. ಇನ್ನೂ ತುಂಬ ಗಟ್ಟಿಯಾಗಿ ಹೇಳುವುದಾದರೆ ಆ ಕ್ಷಣದ ಸಹನೆಯಿಂದ ಗೆದ್ದೆ ಎಂದುಕೊಳ್ಳುವುದಲ್ಲ. ಸಹನೆಯಿಂದಲೇ ಬದುಕು ರೂಪಿಸಿಕೊಂಡು ಸಾಧನೆಯ ಶೃಂಗವೇರಿ ನಿಲ್ಲುವುದು.
ಹಾಗಂತ... ತಾಳ್ಮೆ ಸಹನೆಗಳಿದ್ದರೆ ಮಾತ್ರ ಗೆಲ್ಲಬಹುದು ಅಂತೇನಿಲ್ಲ. ಅದು ಇಲ್ಲದೆಯೂ ಗೆದ್ದವರಿದ್ದಾರೆ. ಆದರೆ, ಗೆದ್ದಮೇಲೆ ಅಲ್ಲಿಯೇ ಹಾಗೇ ನಿಂತವರ ಉದಾಹರಣೆ ಇಲ್ಲ. ಗೆಲ್ಲುವುದು ಸಾಧನೆಯಲ್ಲ, ಗೆಲ್ಲುತ್ತಲೇ ಇರುವುದು ಸಾಧನೆ. ಅಂತಹ ಸಾಧನೆ ರೂಪಿತವಾಗಬೇಕಾದರೆ ಅದಕ್ಕೆ ಸಹನೆಯ ಬೆಂಬಲ ಬೇಕೇ ಬೇಕು ಎಂಬುದು ಮಾತ್ರ ನೆನಪಿನಲ್ಲಿರಲಿ. ಹೀಗೆ ಸಾಧನೆಯ ಹಾದಿಯಲ್ಲಿ ಹೊರಟ ನಮಗೆ ಸಹನೆಯಿಂದಲೇ ಮತ್ತೆ ಮತ್ತೆ ಪುನರ್ಜನ್ಮ ಪಡೆದ ಅಮಿತಾಭ್‌ರಂತವರಾಗಲೀ, ತಮಿಳಿನ ವಿಕ್ರಂರಂತವರಾಗಲೀ, ಖಂಡಿತಾ ಆದರ್ಶವಾಗಬೇಕು. ಕಣ್ಣಿಗೆ ಕಾಣುವ ಕನ್ನಡದ ಅನೇಕ ಕಲಾವಿದರು ಮಾದರಿಯಾಗಬೇಕು. ಅಷ್ಟೇ ಅಲ್ಲ, ಈ ಚಲನಚಿತ್ರರಂಗವನ್ನು ಬಿಟ್ಟು ಇನ್ನಿತರ ರಂಗಗಳಲ್ಲಿ ಸಾಧನೆ ಮಾಡಿದವರೂ ಕೂಡಾ ಸ್ಫೂರ್ತಿಯಾಗಬೇಕು. ಅದಕ್ಕೆಂದೇ... ಕಣ್ಣಿಲ್ಲದೆ, ಕಿವಿಯಿಲ್ಲದೆ, ಮಾತನಾಡಲೂ ಬಾರದೇ ಇದ್ದರೂ ಜಗತ್ತಿಗೇ ಕಣ್ಣು ತೆರೆಯಿಸಿದ ಹೆಲೆನ್ ಕೆಲೆರ್‌ಳಂತಹ ವ್ಯಕ್ತಿತ್ವವನ್ನು ಆರಂಭದಲ್ಲೇ ಪ್ರಸ್ತಾಪಿಸಿದ್ದು. ಕಣ್ಣು, ಮಿದುಳು ಮತ್ತು ಒಂದೇ ಒಂದು ತೋರು ಬೆರಳು ಬಿಟ್ಟು ದೇಹದ ಇನ್ನಾವುದೇ ಭಾಗ ಕೆಲಸ ಮಾಡದೇ ಇದ್ದರೂ ವಿಜ್ಞಾನ ಲೋಕದಲ್ಲಿ ಅಪ್ರಥಮ ಸಾಧನೆ ಮಾಡಿರುವ, ಈಗಲೂ ನಮ್ಮ ಕಣ್ಮುಂದೆ ಇದ್ದು ಜೀವಂತ ದಂತಕಥೆಯಂತಾಗಿರುವ ಸ್ಟೀಫನ್ ಹಾಕಿಂಗ್‌ರ ಹೆಸರು ಪ್ರಸ್ತಾಪಿಸಿದ್ದು. ಇಂಥವರ ಬಗ್ಗೆ ಏನೂ ಗೊತ್ತಿಲ್ಲವೆಂದರೆ ದಯವಿಟ್ಟು ಇಂದೇ ಅವರ ಬದುಕಿನ ಕಥೆಯನ್ನು ಹುಡುಕಿ ಓದಿ ಅರಿಯಲು ಯತ್ನಿಸಿ. ಸಾಧನೆಯ ಹಾದಿಗೆ ಹುಮ್ಮಸ್ಸು ಹುಟ್ಟುತ್ತದೆ. ಸಹನೆಯ ಅಗತ್ಯದ ಅರಿವು ತಾನೇ ತಾನಾಗಿ ನಿಮ್ಮದಾಗುತ್ತದೆ.
- ಇದು ’ಪ್ರೀತಿ’ಯಿಂದ,